ಹೋರಾಟಗಾರರ ಹೋರಾಟ ಹತ್ತಿಕ್ಕಿ, ಕರ್ತವ್ಯ ದುರ್ಬಳಕೆ ಮಾಡಿಕೊಂಡ ಪೊಲೀಸರ ಮೇಲೆ ಪೊಲೀಸ ದೂರು ಪ್ರಾಧಿಕಾರವು ಸೂಕ್ತ ಕ್ರಮ ಕೈಗೊಳ್ಳಲು ರೈತ ಭಾರತ ಪಕ್ಷದಿಂದ ಆಗ್ರಹ
ವಿಜಯಪುರ : ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟಗಾರರ ಮೇಲಿನ ಎಲ್ಲ ಕೇಸುಗಳನ್ನು ವಾಪಸ್ಸು ಪಡೆದು ಬಿಡುಗಡೆಗೊಳಿಸಬೇಕು ಜೊತೆಗೆ ಧರಣಿ ಟೆಂಟ್ ಕಿತ್ತಿರುವುದನ್ನು ಪುನಃ ಹಾಕಿಕೊಡಬೇಕು ಅದರಂತೆ ಕರ್ತವ್ಯ ದುರ್ಬಳಕೆ ಮಾಡಿಕೊಂಡ ಪೊಲೀಸ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಪೊಲೀಸ ದೂರು ಪ್ರಾಧಿಕಾರ ಅಧ್ಯಕ್ಷರು ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳಿಗೆ ರೈತ ಭಾರತ ಪಕ್ಷದ ಪದಾಧಿಕಾರಿಗಳು ಮಂಗಳವಾರ ದೂರು ಸಲ್ಲಿಸಿದರು.
ಈ ಸಂರ್ದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೆಪ್ಟೆಂಬರ್ 18 ರಿಂದ ಜನೇವರಿ 1 ವರೆಗೆ 106 ದಿನಗಳ ಕಾಲ ಶಾಂತಿಯುತವಾಗಿ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ಸರ್ಕಾರದ ಉದ್ದೇಶಿತ ಪಿಪಿಪಿಯ ಮಾದರಿಯ ಖಾಸಗೀಕರಣ ವೈದ್ಯಕೀಯ ಮಹಾವಿದ್ಯಾಲಯದ ವಿರೋಧಿಸಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಹಾಗೂ ಪಕ್ಷಾತೀತ ಮುಖಂಡರು ಧರಣಿ ನಡೆಸುತ್ತಿದ್ದರು.
ದಿನಾಂಕ 01 ಜನೇವರಿ 2026 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಜನೇವರಿ 2 ರಂದು ಸಚಿವ ಶಿವಾನಂದ ಪಾಟೀಲ, ಜನೇವರಿ 3 ರಂದು ನಗರ ಶಾಸಕ ಬಸನಗೌಡ ಆರ್.ಪಾಟೀಲ ಯತ್ನಾಳರವರ ಮನೆಯಮುಂದೆ ಸಾಂಕೇತಿಕ ಪ್ರತಿಭಟನೆ ಮಾಡಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸುವುದಾಗಿ ಹೋರಾಟಗಾರರು ಮುಂಚಿತವಾಗಿಯೇ ಮಾಧ್ಯಮ ಗೋಷ್ಠಿ ನಡೆಸಿ ಸಾರ್ವಜನಿಕವಾಗಿ ಮಾಹಿತಿ ನೀಡಿದ್ದರು.
ದಿನಾಂಕ : 01 ಜನೇವರಿ 2026 ರಂದು ಸೋಲಾಪುರ ರಸ್ತೆಯ ಮಾರ್ಗವಾಗಿ ಮುಗಳಖೋಡ ಮಠದ ಹತ್ತಿರ ಹೋರಾಟಗಾರರು ಸೇರಿ ಸಚಿವ ಎಂ.ಬಿ.ಪಾಟೀಲರ ಮನೆಯ ಮುಂದೆ ಧರಣಿ ಮಾಡಲು ಹೋಗುತ್ತಿದ್ದರು. ಧರಣಿ ಪ್ರಾರಂಭವಾಗುವ ಮೊದಲೇ ಸಾಮಾನ್ಯ ಉಡುಗೆಯಲ್ಲಿದ್ದ ಪೊಲೀಸರು ಏಕಾ ಏಕಿ ಪ್ರಮುಖ ಹೋರಾಟಗಾರರಾದ ಶ್ರೀ ಸಂಗನಬಸವ ಮಹಾಸ್ವಾಮೀಜಿ ಹುಣಶ್ಯಾಳ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೊತೆಗೆ ಮಹಿಳೆಯರು ವಯಸ್ಸಾದವರು ಎನ್ನದೆ ಎಲ್ಲ ಹೋರಾಟಗಾರರನ್ನು ರಸ್ತೆಯ ಮೇಲೆ ಎಳದಾಡಿ ಪೊಲೀಸ ವಾಹನದಲ್ಲಿ ಪ್ರಾಣಿಗಳಂತೆ ತುಂಬಿಕೊಂಡು ಹೋಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ಜೊತೆಗೆ ಕಾನೂನು ಬದ್ಧವಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಅಭಿವ್ಯಕ್ತಿ ಸ್ವಾತಂತ್ರವನ್ನು ಪೊಲೀಸರು ಹತ್ತಿಕ್ಕಿದ್ದು ಖಂಡನೀಯವಾದುದು. ಜೊತೆಗೆ 27 ಜನ ಹೋರಾಟಗಾರರ ಮೇಲೆ ಬಿಎನ್ಎಸ್ ಕಾಯ್ದೆಯ ವಿವಿಧ ಪ್ರಕರಣಗಳಡಿ ಮೊಕ್ಕದ್ದಮ್ಮೆ ದಾಖಲಿಸಿ 6 ಜನ ಪ್ರಮುಖ ಹೋರಾಟಗಾರರನ್ನು ಜೈಲಿಗೆ ಅಟ್ಟಿದ್ದು ಇಡೀ ಜಿಲ್ಲೆಯ ಜನರಿಗೆ ಮಾಡಿದ ಅನ್ಯಾಯವಾಗಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ.
ಜನೇವರಿ 1 ರಾತ್ರಿ 12.45ರ ಸುಮಾರಿಗೆ ಅಂಬೇಡ್ಕರ್ ವೃತ್ತದಲ್ಲಿದ್ದ ಅನಿರ್ಧಿಷ್ಟಾವದಿ ಧರಣಿ ಟೆಂಟ್ನ್ನು ಪೊಲೀಸರು ತೆರವುಗೊಳಿಸಿ ಹೋರಾಟಕ್ಕೆ ಸಂಬಂಧಸಿದ ಪ್ರಮುಖ ದಾಖಲೆ, ಕಾಗದ ಪತ್ರಗಳನ್ನು ಹೊತ್ತುಕೊಂಡು ಮಹಾನಗರ ಪಾಲಿಕೆಯ ಕಸದ ಟ್ಯಾಕ್ಟರ್ ಗಳಲ್ಲಿ ತುಂಬಿಕೊಂಡು ಹೋಗಿ ಹೋರಾಟವನ್ನು ಹತ್ತಿಕ್ಕಿದ್ದು ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಕೂಡಲೇ 27 ಜನರ ಹೋರಾಟಗಾರರ ಮೇಲಿನ ಸುಳ್ಳು ಕೇಸಗಳನ್ನು ವಾಪಸ್ಸು ಪಡೆದು ಜೈಲಿನಲ್ಲಿರುವ 6 ಜನಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು.
ಅಂಬೇಡ್ಕರ್ ವೃತ್ತದಲ್ಲಿನ ಹೋರಾಟದ ಟೆಂಟನ್ನು ಪುನಃ ಹಾಕಿಕೊಡಬೇಕು. ದಸ್ತಗೀರಿ ಮಾಡಿರುವ ಹೋರಾಟಕ್ಕೆ ಸಂಬಂಧಸಿದ ದಾಖಲೆ ಹಾಗೂ ಕಾಗದ ಪತ್ರಗಳನ್ನು ಹೋರಾಟ ಸಮಿತಿ ಸದಸ್ಯರಿಗೆ ಮರಳಿಸಬೇಕು. ಘಟನೆಗೆ ಕಾರಣವಾದ ಪೊಲೀಸರು, ಹಾಗೂ ಪೊಲೀಸ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು ಮತ್ತು ಸಂಕ್ರಮಣದ ನಂತರ ಎಲ್ಲ ರೈತರು ಜನಪರ ಸಂಘಟನೆಗಳು ಸೇರಿ ಜೈಲ ಬರೋ ಚಳುವಳಿಯನ್ನು ಆರಂಭಿಸಲಾಗುವುದು ಎಂದು ರೈತ ಭಾರತ ಪಕ್ಷವು ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ ಆನಂದ ಕುಮಾರ ಜಂಬಗಿ, ವಿಕಾಸ ಖೇಡ, ಸಾಗರ ಬೇನೂರ, ಎಂ.ಬಿ.ಪಾಟೀಲ, ಅಮೃತ ಪಾಟೀಲ, ಅರ್ಜುನ ಹೊರ್ತಿ, ಪ್ರದೀಪ ಬೆನಕನಳ್ಳಿ, ಅಂಬಣ್ಣ ಝಳಕಿ, ಮೈ.ವೈ.ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.